ಸುಮುಖ ಎಂಟರ್ಪ್ರೈಸಸ್ ಲಾಂಛನದಲ್ಲಿ ರಘುಗೌಡ ಅವರು ನಿರ್ಮಿಸಿರುವ ಮಿ|| ಮೊಮ್ಮಗ ಚಿತ್ರದ ಆಡಿಯೋ ಬಿಡುಗಡೆ ಸಮಾರಂಭವು ಕಳೆದ ಭಾನುವಾರದ ಸಂಜೆ ಹಾಸನದ ಜಿಲ್ಲಾ ಕ್ರೀಡಾಂಗಣದಲ್ಲಿ ಅದ್ದೂರಿಯಾಗಿ ನೆರವೇರಿತು. ಬಿರು ಬಿಸಿಲಿನಿಂದ ಬಸವಳಿದಿದ್ದ ಹಾಸನದ ಜನತೆಗೆ ಸಂಜೆಯ ವೇಳೆಗೆ ಮಳೆರಾಯ ಸುರಿಸಿದ ತಂಪಾದ ಹನಿಗಳು ಸಂಜೆ ನಡೆಯುವ ವರ್ಣರಂಜಿತ ಸಮಾರಂಭಕ್ಕೆ ಪ್ರೀತಿಯಿಂದ ಆಹ್ವಾನ ನೀಡಿದಂತಿದ್ದವು. ಅಲ್ಲಿ ಕನ್ನಡ ಚಿತ್ರರಂಗದ ತಾರೆಗಳ ದಂಡೇ ನೆರೆದಿತ್ತು. ಗೋಲ್ಡನ್ಸ್ಟಾರ್ ಗಣೇಶ್, ದುನಿಯಾ ವಿಜಯ್, ಬೇಬಿಡಾಲ್ ಅಮೂಲ್ಯ, ರಂಗಾಯಣ ರಘು, ಬುಲ್ಲೆಟ್ ಪ್ರಕಾಶ್, ಸಾಹಿತಿ ನಾಗೇಂದ್ರ ಪ್ರಸಾದ್, ಮಳವಳ್ಳಿ ಸಾಯಿಕೃಷ್ಣ ಇವರಲ್ಲದೆ ಮಾಜಿ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ, ಹೆಚ್.ಎಂ. ರೇವಣ್ಣ, ಶಾಸಕರಾದ ಹೆಚ್.ಎಸ್. ಪ್ರಕಾಶ್, ಸೇರಿದಂತೆ ಸಿನಿ-ರಾಜಕೀಯ ಕ್ಷೇತ್ರಗಳ ದಿಗ್ಗಜರೆಲ್ಲಾ ಅಲ್ಲಿ ಸೇರಿ ಈ ಅದ್ದೂರಿ ಸಮಾರಂಭಕ್ಕೆ ಸಾಕ್ಷಿಯಾದರು. ಅಲ್ಲದೆ ಕೊನೆಯಲ್ಲಿ ಬಂದ ದೇವೇಗೌಡರ ಕುಟುಂಬದ ಮೊಮ್ಮಗ ಪ್ರಜ್ವಲ್ ಹಾಸನದ ಈ ಯುವ ಉತ್ಸಾಹಿಗಳ ಪ್ರಯತ್ನಕ್ಕೆ ಶುಭ ಹಾರೈಸಿದರು,
ಈ ಚಿತ್ರದಲ್ಲಿ ನಿರ್ಮಾಪಕ ರಘುಗೌಡ ಅವರ ಸಹೋದರ ರವಿಗೌಡ ನಾಯಕನ ಪಾತ್ರ ನಿರ್ವಹಿಸಿದ್ದು, ಕಿರಾತಕ ಖ್ಯಾತಿಯ ನಟಿ ಓವಿಯಾ ನಾಯಕಿಯಾಗಿದ್ದಾರೆ. ರಂಗಾಯಣ ರಘು ನಾಯಕನ ತಾತನಾಗಿ ಅಭಿನಯಿಸಿದ್ದಾರೆ. ಈ ಚಿತ್ರವು ತಾತ ಹಾಗೂ ಮೊಮ್ಮಗನ ನಡುವಿನ ಅವಿನಾಭಾವ ಸಂಬಂಧದ ಕುರಿತಾದ ಕಥಾನಕವನ್ನು ಹೊಂದಿದೆ. ಅವಿನಾಶ್ ಸೇರಿದಂತೆ ಮುಂತಾದ ಕಲಾವಿದರು ಈ ಚಿತ್ರದಲ್ಲಿ ಅಭಿನಯಿಸಿದ್ದಾರೆ. ತಮಿಳಿನಲ್ಲಿ ನಿರ್ಮಾಣವಾಗಿ ಯಶಸ್ವಿ ಪ್ರದರ್ಶನ ಕಂಡ ಮಂಜಾಪೈ ಚಿತ್ರದ ರೀಮಾಕಾದ ಈ ಚಿತ್ರಕ್ಕೆ ಕಥೆ, ಚಿತ್ರಕಥೆ ಬರೆದು ನಿರ್ದೇಶನ ಮಾಡಿದವರು ರಾಘವನ್, ಮೂಲ ತಮಿಳು ಚಿತ್ರಕ್ಕೂ ಇವರೇ ನಿರ್ದೇಶನ ಮಾಡಿದ್ದರು. ಈ ಚಿತ್ರದ ಹಾಡುಗಳಿಗೆ ರಘುನಂದನ್ ಸಂಗೀತ ಸಂಯೋಜನೆ ಮಾಡಿದ್ದಾರೆ.
ಅಂದಿನ ಕಾರ್ಯಕ್ರಮದಲ್ಲಿ ಅನುಪಮಾ ಅವರ ಸುಂದರವಾದ ನಿರೂಪಣೆ, ಅನುರಾಧಾ ಭಟ್ ಅವರ ಸೊಗಸಾದ ಗಾಯನ, ನಟಿ ಸಿಂಧೂ ಲೋಕನಾಥ್ ಅವರ ಅತ್ಯಾಕರ್ಷಕ ನೃತ್ಯಪ್ರದರ್ಶನ, ಮಿಮಿಕ್ರಿ ದಯಾನಂದ್ ಅವರು ನವಿರಾದ ಹಾಸ್ಯಚಟಾಕಿ ನೆರೆದಿದ್ದ ಪ್ರೇಕ್ಷಕರನ್ನು ಭರಪೂರ್ ಆಗಿ ರಂಜಿಸಿದವು.